ಯಕ್ಷಗಾನ ಕನ್ನಡದ ಹೆಗ್ಗುರು: ಡಾ| ಜೋಶಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 22 , 2013
|
ಕನ್ನಡದ ಹೆಗ್ಗುರುತುಗಳಲ್ಲಿ ಒಂದಾದ ಕರಾವಳಿ ಯಕ್ಷಗಾನ ಪರಂಪರೆ ಕನ್ನಡ ಮನಸ್ಸನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ವಿದ್ಯಾಗಿರಿಯ ನಾಡೋಜ ಎಚ್.ಎಲ್. ನಾಗೇಗೌಡ ವೇದಿಕೆಯಲ್ಲಿ ರವಿವಾರ ನಡೆದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ - 2013ರ 'ಜಾನಪದ ಸಿರಿ' ವಿಭಾಗದಲ್ಲಿ 'ಕರಾವಳಿ ಕರ್ನಾಟಕದ ಯಕ್ಷಗಾನ ಪರಂಪರೆಗಳು' ಕುರಿತು ಅವರು ಪರಿಚಯಾತ್ಮಕ ಉಪನ್ಯಾಸವಿತ್ತರು.
'ಯಕ್ಷಗಾನ ಬಯಲಾಟವು ನಾಟ್ಯಶಾಸ್ತ್ರಕ್ಕಿಂತ ಪ್ರಾಚೀನ. ಎಲ್ಲ ಕಲೆಗಳಂತೆ ಕಾಲೋಚಿತ, ಕಲೋಚಿತ ಸಂರಕ್ಷಣೆ, ಪರಿಷ್ಕರಣೆ, ಸಂವರ್ಧನೆ ಹಾಗೂ ವಿಸ್ತರಣೆಗೆ ಒಳಪಟ್ಟಾಗ ಮಾತ್ರ ಉಳಿದು ಬೆಳೆಯಲು ಸಾಧ್ಯ ಎಂದರು.
ತುಳು ಪೌರಾಣಿಕ ಯಕ್ಷಗಾನ
ಕರಾವಳಿ ಹಲವು ಭಾಷೆಗಳ ಸೌಹಾರ್ದದ ನೆಲೆವೀಡು. ಎಲ್ಲರೂ ತುಳು ಮಾತನಾಡುತ್ತಾರೆ. ತುಳುವರಂತೂ ಕನ್ನಡಿಗರೆನ್ನಲು ಹೆಮ್ಮೆಪಡುತ್ತಾರೆ. ಇಂಥಲ್ಲಿ ಹರಕೆ ಬಯಲಾಟ ಮೇಳಗಳು ತುಳು ಪೌರಾಣಿಕ ಯಕ್ಷಗಾನ ಆಡಲು ಆಡಿಸಲು, ನೋಡಲು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಜೋಶಿ ಹೇಳಿದರು.
ಯಕ್ಷಗಾನ ಅನನ್ಯತೆ ಉಳಿಸಿ
`ಯಕ್ಷಗಾನದ ಹಿರಿಮೆಯ ಚಿಂತಾಮಣಿ ಕಡ್ಡಿ ನಮ್ಮ ಕಿವಿಯ ಮೇಲೇ ಇದೆ; ಪಾಪ, ನಮಗೆ ಗೊತ್ತಿಲ್ಲ. ಯಕ್ಷಗಾನವನ್ನು ಸಿನೆಮಾ, ನಾಟಕ ಮಾಡುವುದಲ್ಲ. ಗರ್ನಾಲು, ಬ್ಯಾಂಡು ಬೇಡ. ಅತಿ ವಿಸ್ತಾರವಾದ, ಅಪಾರ ಸಾಧ್ಯತೆ, ಸಾಮರ್ಥ್ಯ ಹೊಂದಿರುವ ಯಕ್ಷಗಾನದಲ್ಲಿ ಏನೇ ಬದಲಾವಣೆ ಮಾಡುವುದಿದ್ದರೂ ಅದು ಯಕ್ಷಗಾನ ಎಂಬ ಮಾಧ್ಯಮ ಮೀರಬಾರದು` ಎಂದು ಅವರು ಎಚ್ಚರಿಸಿದರು.
ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ಅವರು ತೆಂಕು ಬಡಗು ತಿಟ್ಟುಗಳ ಯಕ್ಷಗಾನದ ಪುಟ್ಟ ಪ್ರಾತ್ಯಕ್ಷಿಕೆ ನೆರವೇರಿಸಿದರು. ರಾಜ ವೇಷ, ಪುಂಡು ವೇಷ, ಬಣ್ಣದ ವೇಷ, ಸ್ತ್ರೀ ವೇಷ, ಕಸೆ ಸ್ತ್ರೀ ವೇಷ, ಹಾಸ್ಯವೇಷಗಳು ಪ್ರಾತ್ಯಕ್ಷಿಕೆಯಲ್ಲಿದ್ದು ತೆಂಕಿನ ಭಾಗವತಿಕೆ ಹೊರತುಪಡಿಸಿ ಮುಮ್ಮೇಳ, ಹಿಮ್ಮೇಳದಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದವರು ಪಾಲ್ಗೊಂಡಿದ್ದರು. ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಚಾಲಕ ಸದಾಶಿವ ಶೆಟ್ಟಿಗಾರ್ ಸಹಕಾರದೊಂದಿಗೆ ಡಾ| ಸುಬ್ರಹ್ಮಣ್ಯ ಪದ್ಯಾಣ ನಿರೂಪಿಸಿದರು.
ಯಕ್ಷಗಾನದಲ್ಲಿ ವೈರಸ್
- ತೆಂಕಿನ ಸಮಸ್ಯೆ ಏನೆಂದರೆ ಇದರೊಳಗೆ ವೈರಸ್ ಸೇರಿಕೊಂಡಿದೆ. ಒಳ್ಳೆಯದು ಹೊರಗೆ ಹೋಗುತ್ತಾ ಇದೆ. ಹಾಗೆ ಹೋದದ್ದು ಮತ್ತೆ ಒಳಗೆ ಬರುವುದಿಲ್ಲ. ಕಾಲದ ಕರೆ ಸ್ವೀಕರಿಸದ ಕಲೆ ಕಾಲಗರ್ಭಕ್ಕೆ ಹೋಗುತ್ತದೆ. ಹಾಗೆಂದು ಯಕ್ಷಗಾನಕ್ಕೆ ಹೊಂದದ ಸಂಗತಿಗಳನ್ನು ಸಿಕ್ಕಿಸಿಕೊಳ್ಳುವುದಲ್ಲ.
- ಆಲ್ ಮಲ್ಲ ದುರ್ದುಂಡಿಯಾ, ಶೂರ್ಪನಖೀಯಾ, ಆಂವ ಧರ್ಮರಾಯ, ನಾರದ ಮಹರಾಯ ಎಂಬಂಥ ವಾಗ್ರೂಢಿ ನಮ್ಮಲ್ಲಿದೆ.
- 60 ವರ್ಷಗಳಿಂದ ಯಕ್ಷಗಾನದಲ್ಲಿ ಅದ್ಭುತ ತುಳು ವಾš¾ಯ ಮೂಡಿಬಂದಿದೆ.
- ಶೇಣಿ, ಸಾಮಗರಂಥ ಯಕ್ಷರಂಗದ ದಿಗ್ಗಜರನ್ನು ಕರಾವಳಿ ಕರ್ನಾಟಕ ಹಿರಿಯ ಕಲಾವಿದರು ಎನ್ನುವುದಲ್ಲ ಸ್ವಾಮೀ, ಅವರನ್ನು ಭಾರತದ ಶ್ರೇಷ್ಠ ಕಲಾವಿದರು ಎಂದೇ ಕರೆಯಬೇಕು.
- ಕಟ್ಟೆಯಿಂದ ಹೊಟೇಲ್ ವರೆಗೆ, ಮನೆಯಿಂದ ಅಂಗಡಿ ವರೆಗೆ ಯಕ್ಷಗಾನದ್ದೇ ಚರ್ಚೆ, ಒಂದೊಮ್ಮೆ ಜಗಳ.
- ಕರಾವಳಿಯುದ್ದಕ್ಕೂ 40-42 ಪೂರ್ಣಾವಧಿ ಮೇಳಗಳು, ನೂರಾರು ಅರೆ/ಹವ್ಯಾಸಿ/ಮಹಿಳಾ ತಂಡಗಳು, 1,200 ಮಂದಿ ಪೂರ್ಣಾವಧಿ, 300 ಅರೆಕಾಲಿಕ, 5,000 ಹವ್ಯಾಸಿ ಕಲಾವಿದರು ಸೇರಿದಂತೆ 12,000ದಿಂದ 14,000 ಪ್ರದರ್ಶನಗಳನ್ನು ನೀಡುತ್ತಿರುವುದು ವಿಶ್ವದಲ್ಲೇ ದಾಖಲೆ. 1930ರಿಂದೀಚೆಗೆ ಕನ್ನಡದ ಶ್ರೇಷ್ಠ ವಾš¾ಯವನ್ನು ಯಕ್ಷಗಾನ ತಾಳಮದ್ದಲೆ ಕಟ್ಟಿಕೊಟ್ಟಿದೆ.
- ಪ್ರಭಾಕರ ಜೋಶಿ
ಉಜಿರೆ ಅಶೋಕ ಭಟ್ಟರ ಪ್ರಾತ್ಯಕ್ಷಿಕೆಯಲ್ಲಿ
- ಬಣ್ಣದ ವೇಷದ ಪ್ರಾಚಾರ್ಯರಂತೆ, ಗುಂಡು ಕಿರೀಟದ್ದು ಉಪ ಪ್ರಾಚಾರ್ಯರಿದ್ದ ಹಾಗೆ (ತಮಾಷೆಗೆ ಹೇಳಿದ್ದು ಸ್ವಾಮಿ)
- ಹೆಣ್ಣು ಬಣ್ಣದ ವೇಷ ಹೇನು ತುರಿಸುತ್ತದೆ, ಒತ್ತಿ ಸಾಯಿಸುತ್ತದೆ. ಈಗಿನ ಹುಡುಗಿಯರಿಗೆ ಹೇನು ಇಲ್ಲ. ಏಕೆಂದರೆ ಅಷ್ಟು ಕೂದಲು ಇಲ್ಲವಲ್ಲ.
- ಭೀಮನ ಗದೆ ಮರದ್ದು ಇರಬೇಕಿತ್ತು, ಇಷ್ಟು ದೊಡ್ಡ ಗಾತ್ರದ(ಸ್ಟೀಲಿನದು)ಲ್ಲ. ಇರಲಿ; ಇದು ವಿಶ್ವ ನುಡಿಸಿರಿ ವಿರಾಸತ್ ಅಲ್ಲವೇ?
- ಆಳ್ವಾಸ್ನಲ್ಲಿ 2 ಮೇಳ ಹೊರಡಿಸುವಷ್ಟು ಮಂದಿ ತಯಾರಾಗಿದ್ದಾರೆ.
ಸ್ತ್ರೀ ವೇಷಧಾರಿ `ಮ್ಯಾಡಂ`
ಸ್ತ್ರೀವೇಷ ಕುಣಿತದ ಬಳಿಕ ವೇಷದ ವಿವರಣೆ ನೀಡಲುಪಕ್ರಮಿಸಿದ ಉಜಿರೆ ಅಶೋಕ ಭಟ್ಟರು `ಮ್ಯಾಡಂ, ಮ್ಯಾಡಂ ಕುಳಿತುಕೊಳ್ಳಿ` ಎಂದಾಗ ವೇಷಧಾರಿ ದೀವಿತ್ ಕೋಟ್ಯಾನ್ ತಬ್ಬಿಬ್ಬು. ಕೊನೆಗೆ ಭಟ್ಟರು `ನೀವೀಗ ಸ್ತ್ರೀ ವೇಷದಲ್ಲಿ ಇದ್ದೀರಲ್ಲ, ಹಾಗೆ ಮ್ಯಾಡಂ ಎಂದು ಕರೆದೆ` ಎಂದಾಗ ಕೋಟ್ಯಾನ್ ಮುಖದಲ್ಲಿ ಮುಗುಳ್ನಗೆ.
ಇದೇ ವೇದಿಕೆಯಲ್ಲಿ ದೊಡ್ಡಾಟ, ಸಣ್ಣಾಟ ಹಾಗೂ ಶ್ರೀಕೃಷ್ಣ ಪಾರಿಜಾತ ಪರಂಪರೆಯ ಕುರಿತು ಡಾ| ಶ್ರೀಶೈಲ ಹುದ್ದಾರ್ ಪರಿಚಯಾತ್ಮಕ ಉಪನ್ಯಾಸವಿತ್ತರು. ಡಾ| ಬಸಲಿಂಗಪ್ಪ ಹಿರೇಮಠ ಪ್ರಾತ್ಯಕ್ಷಿಕೆ - ವಿವರಣೆ ನೀಡಿದರು. ಡಾ| ಸೌಮ್ಯ ಸರಸ್ವತಿ ಪದ್ಯಾಣ ನಿರೂಪಿಸಿದರು.
ಕೃಪೆ : http://udayavani.com
|
|
|